ದಾವಣಗೆರೆ : ವಿದ್ಯಾರ್ಥಿಗಳನ್ನು ಕೇವಲ ಪರೀಕ್ಷೆಯಲ್ಲಿ ಉತ್ತೀರ್ಣರನ್ನಾಗಿಸುವುದು ಅಥವಾ ಪದವಿ ಪಡೆಯುವಂತೆ ಮಾಡುವುದಷ್ಟೇ ಶಿಕ್ಷಣದ ಉದ್ದೇಶವಲ್ಲ. ಅವರನ್ನು ಉದ್ಯೋಗಯೋಗ್ಯ, ಆತ್ಮವಿಶ್ವಾಸಿ, ಜವಾಬ್ದಾರಿಯುತ ಹಾಗೂ ಸಮಾಜಮುಖಿ ವೃತ್ತಿಪರರನ್ನಾಗಿ ರೂಪಿಸುವುದೇ ಶಿಕ್ಷಣದ ನಿಜವಾದ ಉದ್ದೇಶ ಎಂದು ವಾಣಿಜ್ಯಶಾಸ್ತ್ರದ ಸಹ ಪ್ರಾಧ್ಯಾಪಕ ಡಾ. ವೆಂಕಟೇಶ್ ಬಾಬು ಎಸ್ ಅಭಿಪ್ರಾಯಪಟ್ಟರು.
ಎಂಬಿಎ ವಿದ್ಯಾರ್ಥಿಗಳ ಬಿಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೇವಲ ಎಂಬಿಎ ಪದವಿ ಉದ್ಯೋಗದ ಭರವಸೆ ನೀಡುವುದಿಲ್ಲ. ಪದವಿಯೊಂದಿಗೆ ಸಂವಹನ ಕೌಶಲ್ಯ, ನಾಯಕತ್ವ ಗುಣ, ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ, ತಂಡದೊಂದಿಗೆ ಕಾರ್ಯನಿರ್ವಹಿಸುವ ಮನೋಭಾವ ಹಾಗೂ ತಂತ್ರಜ್ಞಾನದ ಜ್ಞಾನವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದರು.
ಕೃತಕ ಬುದ್ಧಿಮತ್ತೆ (AI), ಬಿಸಿನೆಸ್ ಅನಾಲಿಟಿಕ್ಸ್, ಡೇಟಾ ಅನಾಲಿಟಿಕ್ಸ್, ಡಿಜಿಟಲ್ ಮಾರ್ಕೆಟಿಂಗ್, ಫಿನ್ಟೆಕ್ ಹಾಗೂ ಸ್ಟಾರ್ಟ್ಅಪ್ ಕ್ಷೇತ್ರಗಳು ವೇಗವಾಗಿ ಬೆಳೆಯುತ್ತಿವೆ. ಈ ಬದಲಾವಣೆಗಳಿಗೆ ಹೊಂದಿಕೊಳ್ಳುವ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಅಪಾರ ಅವಕಾಶಗಳಿವೆ. ಆದ್ದರಿಂದ ಪಠ್ಯಪುಸ್ತಕದ ಜ್ಞಾನದ ಜೊತೆಗೆ ಪ್ರಾಯೋಗಿಕ ಜ್ಞಾನ ಮತ್ತು ಉದ್ಯಮ ಕ್ಷೇತ್ರಕ್ಕೆ ಅಗತ್ಯವಿರುವ ಕೌಶಲ್ಯಗಳನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
“ಉದ್ಯೋಗಕ್ಕಾಗಿ ಕಾಯುವವರಾಗಬೇಡಿ; ಸಾಧ್ಯವಾದಷ್ಟು ಉದ್ಯೋಗವನ್ನು ಸೃಷ್ಟಿಸುವವರಾಗಿ ಬೆಳೆಯಿರಿ. ದೊಡ್ಡ ಕನಸು ಕಾಣಿರಿ, ಸ್ಪಷ್ಟ ಗುರಿ ಇಟ್ಟುಕೊಳ್ಳಿ ಮತ್ತು ಆ ಗುರಿಯನ್ನು ಸಾಧಿಸಲು ನಿರಂತರವಾಗಿ ಶ್ರಮಿಸಿ” ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಯಶಸ್ವಿ ವ್ಯವಸ್ಥಾಪಕನಿಗೆ ಅಂಕಗಳಿಗಿಂತ ಶಿಸ್ತು, ಸಮಯಪಾಲನೆ, ಪ್ರಾಮಾಣಿಕತೆ, ಸಂವಹನ ಕೌಶಲ್ಯ ಮತ್ತು ನಾಯಕತ್ವ ಅತ್ಯಂತ ಮುಖ್ಯ. ವ್ಯವಹಾರದಲ್ಲಿ ಲಾಭ ಮುಖ್ಯವಾದರೂ, ವಿಶ್ವಾಸ, ಮಾನವೀಯತೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ ಕಾರ್ಯನಿರ್ವಹಿಸಿದಾಗ ಮಾತ್ರ ಒಬ್ಬ ವ್ಯಕ್ತಿ ನಿಜವಾದ ಯಶಸ್ವಿ ವೃತ್ತಿಪರನಾಗಲು ಸಾಧ್ಯ ಎಂದು ಹೇಳಿದರು.
ಈ ಹಿಂದೆ ಎಂಬಿಎ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದ ದಿನಗಳನ್ನು ಸ್ಮರಿಸಿದ ಡಾ. ವೆಂಕಟೇಶ್ ಬಾಬು ಎಸ್, ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯೊಂದಿಗೆ ಅವರ ವ್ಯಕ್ತಿತ್ವ ಮತ್ತು ಉದ್ಯೋಗ ಕೌಶಲ್ಯಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು ಎಂದರು.
ಪ್ರಸ್ತುತ ವರ್ಗಾವಣೆಯಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಜಗಳೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದರೂ, ಎಂಬಿಎ ವಿದ್ಯಾರ್ಥಿಗಳೊಂದಿಗಿನ ತಮ್ಮ ಶೈಕ್ಷಣಿಕ ಬಾಂಧವ್ಯ ಸದಾ ಮುಂದುವರಿಯಲಿದೆ. ವಿದ್ಯಾರ್ಥಿಗಳ ಮುಂದಿನ ಶಿಕ್ಷಣ, ಉದ್ಯೋಗ ಮತ್ತು ವೃತ್ತಿಜೀವನಕ್ಕೆ ಅಗತ್ಯವಾದ ಮಾರ್ಗದರ್ಶನ ನೀಡಲು ಸದಾ ಸಿದ್ಧನಿರುವುದಾಗಿ ತಿಳಿಸಿದರು.
“ವಿಫಲತೆ ಅಂತ್ಯವಲ್ಲ; ಅದು ಯಶಸ್ಸಿನತ್ತ ಸಾಗುವ ಪಾಠ. ಅವಕಾಶಕ್ಕಾಗಿ ಕಾಯುವುದಕ್ಕಿಂತ ಅವಕಾಶಗಳನ್ನು ಸೃಷ್ಟಿಸಿಕೊಳ್ಳಿ. ನಿಮ್ಮ ಯಶಸ್ಸು ನಿಮ್ಮ ಕುಟುಂಬಕ್ಕೆ ಮಾತ್ರವಲ್ಲ, ನಿಮ್ಮ ಶಿಕ್ಷಣ ಸಂಸ್ಥೆ ಮತ್ತು ಸಮಾಜಕ್ಕೂ ಹೆಮ್ಮೆ ತರುವಂತಿರಲಿ” ಎಂದು ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಸಂದೇಶ ನೀಡಿದರು.
ಕಾರ್ಯಕ್ರಮದಲ್ಲಿ ಪ್ರೊ ಸುನೀತ ಕೆಬಿ ಪ್ರೊ ರೇಖಾ bi ವಿ ಪ್ರೊ ಶ್ರೀದೇವಿ ಪ್ರೊ ಪ್ರಭು ನಾಯಕ್ ಪ್ರೊ ಪ್ರಭಾಕರ್ ಪ್ರೊ ನಾಗರಾಜ್ ಪ್ರೊ ಪ್ರತಿಭಾ ಪ್ರೊ ಸುಮಲತಾ ಪ್ರೊ ರವಿ ಪ್ರೊ ರಾಧ ಇತರರು ಹಾಜರಿದ್ದರು