ಚಿತ್ರದುರ್ಗ : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಜಿಲ್ಲಾ ಸಂಸ್ಥೆಯಿಂದ ಸೈನ್ಯದ ಕಮಾಂಡರ್ ಹಾಗೂ ಜಿಲ್ಲೆಯ 48 ನಿವೃತ್ತ ಯೋಧರುಗಳನ್ನು ಭಾನುವಾರ ಸನ್ಮಾನಿಸಲಾಯಿತು.
ಉತ್ತರ ಪ್ರದೇಶದ ಕಮಾಂಡರ್ ಮೇಜರ್ ಜನರಲ್ ಅರ್ವಿಂದರ್ಸಿಂಗ್ ಸನ್ಮಾನ ಸ್ವೀಕರಿಸಿ ಮಾತನಾಡುತ್ತ ನಾನು ಕಾರ್ಗಿಲ್ ಯುದ್ದದಲ್ಲಿ ಭಾಗವಹಿಸಿ ಯುದ್ದವನ್ನು ಕಣ್ಣಾರೆ ಕಂಡಿದ್ದೇನೆ. ಪ್ರತಿ ಮನೆಯಿಂದ ಒಬ್ಬ ಮಕ್ಕಳನ್ನು ಸೈನ್ಯಕ್ಕೆ ಸೇರಿಸಿ ದೇಶಭಕ್ತಿ ಮೂಡಿಸಬೇಕು. ಗಡಿಯಲ್ಲಿ ಕಾಯುತ್ತ ದೇಶವನ್ನು ರಕ್ಷಿಸುವುದು ಅಸಮಾನ್ಯವಾದ ಕೆಲಸ. ಅಷ್ಟು ದೂರದಿಂದ ನನ್ನನ್ನು ಕರೆಸಿ ನೀವುಗಳು ಸನ್ಮಾನಿಸಿರುವುದು ನನಗೆ ಖುಷಿಯೆನಿಸುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಕಾರ್ಯದರ್ಶಿ ಬಿ.ಎ.ಲಿಂಗಾರೆಡ್ಡಿ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಸೈನಿಕರ ಶ್ರಮ ಅತ್ಯಂತ ಪವಿತ್ರವಾದುದು. ಪರ್ವತಗಳಲ್ಲಿ ಬೆಟ್ಟ ಗುಡ್ಡಗಳಲ್ಲಿ ಗಡಿಯಲ್ಲಿ ಪ್ರಾಣದ ಹಂಗು ತೊರೆದು ಚಳಿ ಗಾಳಿ ಮಳೆಯನ್ನು ಲೆಕ್ಕಿಸದೆ ಯೋಧರು ದೇಶ ಕಾಯುತ್ತಿರುವುದರಿಂದ ಭಾರತದ ಪ್ರತಿಯೊಬ್ಬ ಪ್ರಜೆಯೂ ಸುರಕ್ಷಿತವಾಗಿದ್ದಾರೆ. ಸೈನ್ಯದ ಮಹತ್ವವನ್ನು ಇಂದಿನ ಮಕ್ಕಳಿಗೆ ತಿಳಿಸಬೇಕಾಗಿದೆ. ದೇಶ ಪ್ರೇಮದ ಜೊತೆ ಪರಿಸರ ಸಂರಕ್ಷಣೆ, ಗಿಡ ಮರಗಳನ್ನು ಬೆಳೆಸುವ ಜಾಗೃತಿ ಮೂಡಿಸಬೇಕಿದೆ ಎಂದು ಹೇಳಿದರು.
ಸೇನೆಯಲ್ಲಿ ದೇಶ ರಕ್ಷಣೆಗೆ ನಿಂತಿರುವ ನೀವುಗಳು ಇಂದಿನ ಪೀಳಿಗೆಗೆ ಮಾರ್ಗದರ್ಶಕರಾಗಬೇಕು. ಮಾನವನ ದುರಾಸೆಯಿಂದ ಗಿಡ-ಮರಗಳು ನಾಶವಾಗುತ್ತಿವೆ. ಪ್ರತಿಯೊಬ್ಬರು ಒಂದೊಂದು ಗಿಡ ನೆಟ್ಟು ಪರಿಸರಕ್ಕೆ ಹಸಿರು ಕೊಡುಗೆಯನ್ನು ನೀಡಬೇಕು ಎಂದರು.
ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಉಪಾಧ್ಯಕ್ಷ ಪರಮೇಶ್ ಮಾತನಾಡಿ ಯೋಧರು ಗಡಿಯಲ್ಲಿ ಕಾಯುತ್ತಿರುವುದರಿಂದ ಪ್ರಜೆಗಳು ಕ್ಷೇಮವಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸೈನ್ಯಕ್ಕೆ ಸೇರುವವರ ಸಂಖ್ಯೆ ಕಡಿಮೆಯಿದೆ. ಎಲ್ಲರೂ ದೇಶಭಕ್ತಿ ಬೆಳೆಸಿಕೊಂಡಾಗ ಮಾತ್ರ ಯೋಧರಾಗಲು ಸಾಧ್ಯ ಎಂದು ತಿಳಿಸಿದರು.
ಕಮಲೇಶ್ಸಿಂಗ್, ಗುಂಡುರಾವ್ಪಾಟೀಲ್, ಜಿಲ್ಲಾ ನಿವೃತ್ತ ಯೋಧರ ಸಂಘದ ಅಧ್ಯಕ್ಷ ಸತ್ಯನಾರಾಯಣ, ನಿವೃತ್ತ ಯೋಧ ಸಾಧಿಕ್ ಇವರುಗಳು ವೇದಿಕೆಯಲ್ಲಿದ್ದರು.
ಸ್ಕೌಟ್ಸ್ ಜಿಲ್ಲಾ ಆಯುಕ್ತ ಪಿ.ವೈ.ದೇವರಾಜ್ಪ್ರಸಾದ್, ಹೆಚ್.ಕ್ಯು.ಸಿ. ಅನಂತರೆಡ್ಡಿ, ಸಂಸ್ಥೆಯ ಜಿಲ್ಲಾ ಸಹ ಕಾರ್ಯದರ್ಶಿ ಡಾ.ರಹಮತ್ವುಲ್ಲಾ
ಉಪಾಧ್ಯಕ್ಷ ಎಂ.ಮಹೇಂದ್ರನಾಥ್, ಸ್ಥಳೀಯ ಸಂಸ್ಥೆ ಉಪಾಧ್ಯಕ್ಷರುಗಳಾದ ಗುರುಮೂರ್ತಿ, ಪ್ರಸನ್ನಕುಮಾರ್, ಖಜಾಂಚಿ ಗಂಗಾಧರರೆಡ್ಡಿ, ಜಿಲ್ಲಾ ನಿವೃತ್ತ ಯೋಧರ ಸಂಘದ ಉಪಾಧ್ಯಕ್ಷ ಸಣ್ಣಸೂರಯ್ಯ, ಶಿಕ್ಷಕರುಗಳಾದ ರವಿ, ವಿಶ್ವನಾಥ್ ಇವರುಗಳು ಸನ್ಮಾನ ಸಮಾರಂಭದಲ್ಲಿ ಉಪಸ್ಥಿತರಿದ್ದರು.