ಕಾಂಗ್ರೆಸ್ ಕಾರ್ಯಕರ್ತರು ಹಾಗೂ ವೀಕ್ಷರುಗಳ ನಡುವೆ ಮಾತಿನ ಜಟಾಪಟಿ..!
ಚಿತ್ರದುರ್ಗ : ಜಿಲ್ಲಾ ಕಾಂಗ್ರೆಸ್ಗೆ ನೂತನ ಅಧ್ಯಕ್ಷರ ನೇಮಕ ಕುರಿತು ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ನಡೆದ ಸಂಘಟನ್ ಸೃಜನ್ ಅಭಿಯಾನ್ ಸಭೆಯ ಆರಂಭದಲ್ಲಿ ಗದ್ದಲ ದಾಂಧಲೆಯುಂಟಾದ ಪರಿಣಾಮ ಕಾರ್ಯಕರ್ತರು ಹಾಗೂ ಕಾಂಗ್ರೆಸ್ ವೀಕ್ಷರುಗಳ ನಡುವೆ ಮಾತಿನ ಜಟಾಪಟಿ ನಡೆಯಿತು.
ನಗರ ಮತ್ತು ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಆಯೋಜಿಸಲಾಗಿದ್ದ ಸಭೆಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಬಿ.ಟಿ.ಜಗದೀಶ್ ಆಗಮಿಸಿದಾಗ ಬೆಂಬಲಿಗರು ಜೈಕಾರ ಹಾಕುತ್ತ ಗದ್ದಲ ಸೃಷ್ಠಿಸಿದರು. ನಗರಸಭೆ ಮಾಜಿ ಉಪಾಧ್ಯಕ್ಷ ಎಸ್.ಬಿ.ಎಲ್.ಮಲ್ಲಿಕಾರ್ಜುನ್ ಬಿ.ಟಿ.ಜಗದೀಶ್ವರಿಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ನೀಡಬೇಕೆಂದು ಏರು ಧ್ವನಿಯಲ್ಲಿ ಕೂಗಿ ಅವರ ಭಾವಚಿತ್ರವನ್ನು ವೀಕ್ಷಕರುಗಳ ಎದುರು ಪ್ರದರ್ಶಿಸಿದಾಗ ಜೊತೆಯಲ್ಲಿದ್ದ ಇತರೆ ಬೆಂಬಲಿಗರು ನಾಯಕರುಗಳತ್ತ ನುಗ್ಗಿದ್ದರಿಂದ ಹತ್ತು ನಿಮಿಷಗಳಿಗೂ ಹೆಚ್ಚು ಕಾಲ ಸಭೆ ಗದ್ದಲದಲ್ಲಿ ಮುಳುಗಿತು.
ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಶ್ರೀರಾಂ, ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಮಂಜಪ್ಪ ಇವರುಗಳು ವೇದಿಕೆ ಹತ್ತಿ ಬಿ.ಟಿ.ಜಗದೀಶ್ ಪರ ಘೋಷಣೆಗಳನ್ನು ಕೂಗಿದರು. ಆಗ ಮಾಜಿ ಸಂಸದ ವಿ.ಎಸ್.ಉಗ್ರಪ್ಪನವರು ಶಿಸ್ತಿಲ್ಲದ ನಿಮ್ಮ ನಡೆಯನ್ನು ಸಹಿಸುವುದಿಲ್ಲ. ಬಿಜೆಪಿ.ಬೆಂಬಲಿಗರ ತರ ಕಾಣುತ್ತೀರ ಎಂದಾಗ ಶ್ರೀರಾಮ್ ಮತ್ತಿತರರು ಉಗ್ರಪ್ಪನವರ ವಿರುದ್ದ ಹರಿಹಾಯ್ದರು. ಆಗ ನಿಮ್ಮ ಗೊಡ್ಡು ಬೆದರಿಕೆಗಳಿಗೆಲ್ಲಾ ಜಗಲ್ಲ. ಸಭೆಯಿಂದ ಹೊರ ನಡೆಯಿರಿ ಎಂದು ಗದರಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಒಬ್ಬೊಬ್ಬ ಆಕಾಂಕ್ಷಿಯು ಕೂಡ ತನ್ನ ಬೆಂಬಲಿಗರನ್ನು ಕರೆ ತಂದು ನಾಯಕರುಗಳ ಮುಂದೆ ಪ್ರದರ್ಶಿಸುತ್ತಿದ್ದರು. ಕಾಂಗ್ರೆಸ್ ಕಾರ್ಯಕರ್ತರುಗಳೆ ಅಲ್ಲದೆ ಅನೇಕ ಮಹಿಳೆಯರು ಕಾಂಗ್ರೆಸ್ ಕಚೇರಿ ಎದುರು ಜಮಾಯಿಸಿದ್ದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸಿರುವ 60 ಆಕಾಂಕ್ಷಿಗಳ ಹೆಸರುಗಳನ್ನು ಸೌಗಂಧಿಕ ರಘುನಾಥ್ ಓದಿ ಇದರಲ್ಲಿ ಒಬ್ಬರ ಹೆಸರನ್ನು ಹೈಕಮಾಂಡ್ಗೆ ಶಿಫಾರಸ್ಸು ಮಾಡಲಾಗುವುದೆಂದು ಹೇಳಿದಾಗ ಸಭೆಯಲ್ಲಿದ್ದ ಅನೇಕರು ಆಕ್ಷೇಪ ವ್ಯಕ್ತಪಡಿಸಿ ಬೇರೆ ಬೇರೆ ತಾಲ್ಲೂಕುಗಳಲ್ಲಿ ಸಭೆ ನಡೆಸಿದಾಗ ಆರು ಜನರ ಹೆಸರನ್ನು ಆಯ್ಕೆ ಮಾಡಿ ಪಕ್ಷದ ವರಿಷ್ಟರಿಗೆ ಕಳಿಸಲಾಗುವುದೆಂದು ತಿಳಿಸಿ ಈಗ ಏಕೆ ಒಬ್ಬರ ಹೆಸರನ್ನು ಶಿಫಾರಸ್ಸು ಮಾಡಲಾಗುವುದೆಂದು ಹೇಳುತ್ತಿದ್ದೀರ. ಈ ತಾರತಮ್ಯವೇಕೆ ಎಂದು ಕೆಲವು ಆಕಾಂಕ್ಷಿಗಳು ತಗಾದೆ ತೆಗೆದಾಗ ಮತ್ತೆ ಸಭೆ ಗೊಂದಲವನ್ನು ಎದುರಿಸಬೇಕಾಯಿತು. ಆಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್ಪೀರ್ ಶಿಸ್ತಿಲ್ಲದೆ ವರ್ತಿಸುವವರಿಗೆ ನೋಟಿಸ್ ಕೊಡಬೇಕಾಗುತ್ತದೆಂದು ಎಚ್ಚರಿಸಿದರು.
ಒಟ್ಟಾರೆ ಸಂಘಟನ್ ಸೃಜನ್ ಅಭಿಯಾನ್ ಸಭೆ ಆರಂಭದಿಂದ ಕೊನೆವರೆಗೂ ಗದ್ದಲದಲ್ಲಿಯೇ ನಡೆಯಿತು.
ಅಸ್ಸಾಂನಿಂದ ಜಿಲ್ಲೆಗೆ ವೀಕ್ಷಕರಾಗಿ ಆಗಮಿಸಿರುವ ರಿಪುನ್ ಬೊಹರಾ ಸುಮ್ಮನೆ ಕುಳಿತು ಎಲ್ಲವನ್ನು ಮೌನವಾಗಿ ವೀಕ್ಷಿಸುತ್ತಿದ್ದರು.