ಚಿತ್ರದುರ್ಗ : ದುಶ್ಚಟಗಳಿಂದ ಮಕ್ಕಳು ದೂರವಿರಬೇಕಾದರೆ ಕ್ರೀಡೆಯಲ್ಲಿ ಭಾಗವಹಿಸುವಿಕೆ ಮುಖ್ಯ ಎಂದು ಕರ್ನಾಟಕ ಆದಿ ಜಾಂಬವ ಅಭಿವೃದ್ದಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್ ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಶಾಲಾ ಶಿಕ್ಷಣ ಇಲಾಖೆ, ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಸಹಯೋಗದೊಂದಿಗೆ 2026-27 ನೇ ಸಾಲಿನ ಚಿತ್ರದುರ್ಗ ಕಸಬಾ ಹೋಬಳಿ ಮಟ್ಟದ ಹದಿನಾಲ್ಕು ವರ್ಷದೊಳಗಿನ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ ಉದ್ದೇಶಿಸಿ ಮಾತನಾಡಿದರು.
ಸಿಗರೇಟು, ಕುಡಿತ, ಗಾಂಜಾ ಸೇವನೆಯಿಂದ ಮಕ್ಕಳು ದೂರವಿದ್ದು, ದೇಹ ಮತ್ತು ಮನಸ್ಸಿನ ಆರೋಗ್ಯವನ್ನು ಸದೃಢವಾಗಿಟ್ಟುಕೊಳ್ಳಬೇಕು. ಯುವ ಜನಾಂಗ ದಾರಿ ತಪ್ಪುತ್ತಿರುವುದು ನೋವಿನ ಸಂಗತಿ. ಚಿತ್ರದುರ್ಗದಲ್ಲಿ ಎರಡು ಲಕ್ಷ ಜನಸಂಖ್ಯೆಯಿದ್ದು, ಕೇವಲ ನೂರರಿಂದ ನೂರೈವತ್ತು ಜನ ಮಾತ್ರ ಕ್ರೀಡಾಂಗಣದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಶಿಕ್ಷಣದ ಜೊತೆ ಮಕ್ಕಳು ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು. ಇದಕ್ಕೆ ಶಿಕ್ಷಕರು, ಪೋಷಕರುಗಳು ಪ್ರೋತ್ಸಾಹಿಸುವಂತೆ ತಿಳಿಸಿದರು.
ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್ಪೀರ್ ಮಾತನಾಡಿ ಆರೋಗ್ಯವಾಗಿರಬೇಕಾದರೆ ಕಡ್ಡಾಯವಾಗಿ ಮಕ್ಕಳು ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು. ಸೋಲು-ಗೆಲುವಿಗಿಂತ ಪಾಲ್ಗೊಳ್ಳುವಿಕೆ ಮುಖ್ಯ. ಹೋಬಳಿ ಮಟ್ಟದಿಂದ ಜಿಲ್ಲೆ, ರಾಜ್ಯ, ಅಂತರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಿ ಪ್ರತಿಭೆಯನ್ನು ಪ್ರದರ್ಶಿಸುವಂತಾಗಿ ಎಂದು ಕ್ರೀಡಾಪಟುಗಳನ್ನು ಹಾರೈಸಿದರು.
ಕ್ರೀಡಾಕೂಟದ ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಡಾ.ಸೈಯದ್ ಇಸ್ಮಾಯಿಲ್ ಮಾತನಾಡುತ್ತ ಚಿಕ್ಕ ಮಕ್ಕಳಲ್ಲಿ ಕ್ರೀಡೆಯ ಬಗ್ಗೆ ಆಸಕ್ತಿ ಮೂಡಿಸಬೇಕು. ಶಾಲೆಯಲ್ಲಿ ಪಠ್ಯಗಳಿಗಷ್ಟೆ ಸೀಮಿತಗೊಳಿಸದೆ ಆಟಗಳಲ್ಲಿಯೂ ಭಾಗವಹಿಸುವಂತೆ ಮಾಡುವ ಜವಾಬ್ದಾರಿ ಪೋಷಕರು ಹಾಗೂ ಶಿಕ್ಷಕರುಗಳ ಮೇಲಿದೆ ಎಂದರು.
ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಆರ್.ಶಿವಣ್ಣ ಮಾತನಾಡುತ್ತ ದೇಹ ಮತ್ತು ಮನಸ್ಸು ಆರೋಗ್ಯಕರವಾಗಿರಬೇಕಾದರೆ ಸದಾ ಕ್ರೀಡೆಯಲ್ಲಿ ಮಕ್ಕಳು ತೊಡಗಬೇಕು.
ಶಿಕ್ಷಣದಷ್ಟೆ ಕ್ರೀಡೆಗೂ ಹೆಚ್ಚಿನ ಮಹತ್ವ ಕೊಡಬೇಕಿದೆ ಎಂದು ನುಡಿದರು.
ಆಗ್ನೇಯ ಪದವೀಧರ ಕ್ಷೇತ್ರದ ಆಕಾಂಕ್ಷಿ ಶಶಿ ಹುಲಿಕುಂಟೆ, ಕಾಂಗ್ರೆಸ್ ಪದವೀಧರ ವಿಭಾಗದ ಅಧ್ಯಕ್ಷ ಪ್ರಕಾಶ್ ರಾಮನಾಯ್ಕ, ಶ್ರೀನಿವಾಸ್, ರಾಜಪ್ಪ, ಮಲ್ಲಿಕಾರ್ಜುನ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಹಂತೇಶ್, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಣ್ಣ, ಕನಕ, ಭೈರೇಶ್, ಲೇಖಕ ಹೆಚ್.ಆನಂದ್ಕುಮಾರ್, ಸರಸ್ವತಿ
ಮಂಜುಳ, ರಂಗಸ್ವಾಮಿ, ಮುರುಗೇಶ್, ಶಿವಾನಂದ, ಪ್ರಭಾವತಿ, ಶಶಿಕಿರಣ್, ಚಿದಾನಂದಸ್ವಾಮಿ, ಕಲ್ಲೇಶ್ ಮೌರ್ಯ, ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಉಮೆ ಸುಮಯ್ಯ, ಶಿಕ್ಷಕಿ ಲತ ಇವರುಗಳು ವೇದಿಕೆಯಲ್ಲಿದ್ದರು.