ಚಿತ್ರದುರ್ಗ: ಮಳೆಗಾಲದ ಹಿನ್ನೆಲೆಯಲ್ಲಿ ವಿಶ್ವ ವಿಖ್ಯಾತ ಜೋಗ ಜಲಪಾತ ವೀಕ್ಷಣೆಗೆ ತೆರಳುವ ಪ್ರವಾಸಿಗರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಚಿತ್ರದುರ್ಗ ವಿಭಾಗವು ಪ್ರತಿ ಭಾನುವಾರ ವಿಶೇಷ ಪ್ರವಾಸ ಪ್ಯಾಕೇಜ್ ಬಸ್ ಸೇವೆಯನ್ನು ಆರಂಭಿಸುತ್ತಿದೆ.
ಈ ವಿಶೇಷ ಬಸ್ ಸೇವೆಯು ಇದೇ ಆಗಸ್ಟ್ 09 ರಿಂದ ಪ್ರಾರಂಭವಾಗಲಿದ್ದು, ಚಳ್ಳಕೆರೆ, ಚಿತ್ರದುರ್ಗ ಹಾಗೂ ಹೊಳಲ್ಕೆರೆ ಬಸ್ ನಿಲ್ದಾಣಗಳಿಂದ ಹೊರಡಲಿದೆ. ಈ ಪ್ಯಾಕೇಜ್ನಲ್ಲಿ ಪ್ರವಾಸಿಗರು ಜೋಗ ಜಲಪಾತದ ಜೊತೆಗೆ ವರದಮೂಲ ಮತ್ತು ಇಕ್ಕೇರಿ ತಾಣಗಳನ್ನು ವೀಕ್ಷಿಸಬಹುದಾಗಿದೆ. ಈ ಬಸ್ಗಳು ಚನ್ನಗಿರಿ, ಶಿವಮೊಗ್ಗ ಹಾಗೂ ಸಾಗರ ಮಾರ್ಗವಾಗಿ ಸಂಚರಿಸಲಿವೆ.
ಚಳ್ಳಕೆರೆಯಿಂದ ಬೆಳಿಗ್ಗೆ 5.15ಕ್ಕೆ ಹೊರಡುವ ಬಸ್ ಮಧ್ಯಾಹ್ನ 1.45ಕ್ಕೆ ಜೋಗ ತಲುಪಲಿದ್ದು, ಟಿಕೆಟ್ ದರ ವಯಸ್ಕರಿಗೆ ರೂ.600 ಹಾಗೂ ಮಕ್ಕಳಿಗೆ ರೂ.500 ನಿಗದಿಪಡಿಸಲಾಗಿದೆ. ಚಿತ್ರದುರ್ಗದಿಂದ ಬೆಳಿಗ್ಗೆ 6 ಗಂಟೆಗೆ ಹೊರಡುವ ಬಸ್ ಮಧ್ಯಾಹ್ನ 1.45ಕ್ಕೆ ತಲುಪಲಿದ್ದು, ವಯಸ್ಕರಿಗೆ ರೂ.500 ಮತ್ತು ಮಕ್ಕಳಿಗೆ ರೂ. 400 ದರವಿದೆ. ಹಾಗೆಯೇ ಹೊಳಲ್ಕೆರೆಯಿಂದ ಬೆಳಿಗ್ಗೆ 6.45ಕ್ಕೆ ಹೊರಡುವ ಬಸ್ ಮಧ್ಯಾಹ್ನ 1.45ಕ್ಕೆ ಜೋಗ ತಲುಪಲಿದ್ದು, ವಯಸ್ಕರಿಗೆ ರೂ.450 ಹಾಗೂ ಮಕ್ಕಳಿಗೆ ರೂ.350 ಪ್ರಯಾಣ ದರ ನಿಗದಿ ಮಾಡಲಾಗಿದೆ.
ಈ ವಿಶೇಷ ಟೂರ್ ಪ್ಯಾಕೇಜ್ಗೆ www.ksrtc.in ವೆಬ್ಸೈಟ್ ಮೂಲಕ ಆನ್ಲೈನ್ ಬುಕಿಂಗ್ ಮಾಡಬಹುದು. ಒಂದು ವೇಳೆ ಆಸನಗಳು ಖಾಲಿ ಇದ್ದಲ್ಲಿ ಬಸ್ನ ನಿರ್ವಾಹಕರ ಬಳಿಯೂ ನೇರವಾಗಿ ಟಿಕೆಟ್ ಪಡೆಯಬಹುದಾಗಿದೆ. ಈ ವಿಶೇಷ ಪ್ಯಾಕೇಜ್ಗೆ ‘ಶಕ್ತಿ' ಯೋಜನೆ ಅನ್ವಯಿಸುವುದಿಲ್ಲ ಎಂದು ಕೆಎಸ್ಆರ್ಟಿಸಿ ಚಿತ್ರದುರ್ಗ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.