ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ಮಸ್ತಕವ ಮುಟ್ಟಿ ನೋಡಿದಡೆ,
ಮನೋಹರದಳಿವು ಕಾಣ ಬಂದಿತ್ತು!
ಮುಖಮಂಡಲವ ಮುಟ್ಟಿ ನೋಡಿದಡೆ,
ಮೂರ್ತಿಯ ಅಳಿವು ಕಾಣ ಬಂದಿತ್ತು!
ಕೊರಳ ಮುಟ್ಟಿ ನೋಡಿದಡೆ,
ಗರಳಧರನ ಇರವು ಕಾಣ ಬಂದಿತ್ತು!
ತೋಳುಗಳ ಮುಟ್ಟಿ ನೋಡಿದಡೆ,
ಶಿವನಪ್ಪುಗೆ ಕಾಣ ಬಂದಿತ್ತು!
ಉರಸ್ಥಲವ ಮುಟ್ಟಿ ನೋಡಿದಡೆ,
ಪರಸ್ಥಲದಂಗಲೇಪ ಕಾಣ ಬಂದಿತ್ತು
ಬಸಿರ ಮುಟ್ಟಿ ನೋಡಿದಡೆ,
ಬ್ರಹ್ಮಾಂಡವ ಕಾಣ ಬಂದಿತ್ತು!
ಗುಹ್ಯವ ಮುಟ್ಟಿ ನೋಡಿದಡೆ,
ಕಾಮದಹನ ಕಾಣ ಬಂದಿತ್ತು!
ಮಹಾಲಿಂಗ ತ್ರಿಪುರಾಂತಕದೇವಾ,
ಮಹಾದೇವಿಯಕ್ಕನ ನಿಲುವನರಿಯದೆಅಳುಪಿ ಕೆಟ್ಟೆನು.
-ಕಿನ್ನರಿ ಬ್ರಹ್ಮಯ್ಯ