ಚಿತ್ರದುರ್ಗ : ದೇಶದ ಪ್ರಧಾನ ಮಂತ್ರಿ ನರೇಂಧ್ರ ಮೋದಿಯವರ ಜನ್ಮ ದಿನವನ್ನು ಬಿಜೆಪಿ ಸಡಗರದಿಂದ ಆಚರಣೆ ಮಾಡುತ್ತಿದ್ದರೆ ಜಿಲ್ಲಾ ಯುವ ಕಾಂಗ್ರೆಸ್ ಮೋದಿಯವರ ಜನ್ಮದಿನವನ್ನು ನಿರುದ್ಯೋಗ ದಿನವನ್ನಾಗಿ ಆಚರಣೆ ಮಾಡುವುದರ ಮೂಲಕ ಅವರ ಜನ್ಮ ದಿನವನ್ನು ವಿರೋಧ ವ್ಯಕ್ತಪಡಿಸಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ತರಕಾರಿ ಮಾರಾಟ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟಿಸಿ, ಈ ದಿನವನ್ನು `ರಾಷ್ಟ್ರೀಯ ನಿರುದ್ಯೋಗ ದಿನ'ವನ್ನಾಗಿ ಆಚರಿಸಲಾಯಿತು. ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆಯನ್ನು ಖಂಡಿಸಿ ಯುವ ಕಾಂಗ್ರೆಸ್ ಮುಖಂಡರು ಕೇಂದ್ರ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದರು. ಚಿತ್ರದುರ್ಗ ಕಾಂಗ್ರೆಸ್ ಸಮಿತಿಯ ಮುಂಭಾಗದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಉಲ್ಲಾಸ್ ಕಾರೇಹಳ್ಳಿ ನೇತೃತ್ವದಲ್ಲಿ ಪದವಿಯನ್ನು ಪಡೆದ ನಿರುದ್ಯೋಗಿ ಯುವ ಜನತೆ ತರಕಾರಿಯನ್ನು ಮಾರಾಟ ಮಾಡುವುದರ ಮೂಲಕ ಮೋದಿಯವರ ಜನ್ಮ ದಿನವನ್ನು ನಿರುದ್ಯೋಗಿ ದಿನವನ್ನಾಗಿ ಆಚರಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಉಲ್ಲಾಸ್ ಕಾರೇಹಳ್ಳಿ, ಮೋದಿಯವರು 2014ರಲ್ಲಿ ದೇಶದ ಚುಕ್ಕಾಣಿಯನ್ನು ಹಿಡಿಯುವಾಗ ದೇಶದ ಯುವ ಜನತೆಗೆ ಮಾತನ್ನು ನೀಡಿದ್ದರು ಅದೇನೆಂದರೆ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ವರ್ಷಕ್ಕೆ 2 ಕೋಟಿ ಉದ್ಯೋಗವನ್ನು ಸೃಷ್ಟಿ ಮಾಡಲಾಗುವುದು ಇದರಿಂದ ದೇಶದದಲ್ಲಿ ನಿರುದ್ಯೋಗ ಸಮಸ್ಯೆ ಪರಿಹಾರವಾಗುತ್ತದೆ ಎಂದು ಹೇಳಿದ್ದರು ಅವರು ಅಧಿಕಾರಕ್ಕೆ ಬಂದು ಇಂದಿಗೆ 12 ವÀರ್ಷವಾಗಿದೆ ಈ ವೇಳೆಗೆ 24 ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿತ್ತು ಆದರೆ ಇದುವರೆವಿಗೂ ಸಹಾ ಒಂದು ಉದ್ಯೋಗವನ್ನು ಸಹಾ ಸೃಷ್ಟಿ ಮಾಡಿಲ್ಲ ಇದರ ಬದಲಿಗೆ ಯುವ ನಿರುದ್ಯೋಗಿಗಳಿಗೆ ಮೋದಿ ಯವರು ಸರ್ಕಾರಿ ಕೆಲಸವನ್ನು ಕಾಯಬೇಡಿ ಇದರ ಬದಲಿಗೆ ಪಕೋಡ ಮಾಡಿ ಮಾರಾಟ ಮಾಡಿ ಎಂದು ಹೇಳಿದ್ದರು ಇದನ್ನು ಯುವ ಕಾಂಗ್ರೆಸ್ ಖಂಡಿಸುತ್ತದೆ ಎಂದರು.
ಉದ್ಯೋಗ ಸಿಗದೆ ಇಂದಿನ ಪದವೀಧರ ಯುವಕರು ಬೀದಿಯಲ್ಲಿ ತರಕಾರಿ ಮಾರುವುದು, ಟೀ ಅಂಗಡಿ ನಡೆಸುವುದು ಮತ್ತು ಪಕೋಡ ಮಾರಾಟ ಮಾಡುವಂತಹ ಪರಿಸ್ಥಿತಿಗೆ ತಳ್ಳಲ್ಪಟ್ಟಿದ್ದಾರೆ. ದೇಶದ ಯುವಜನತೆಗೆ ಅನ್ಯಾಯ ಎಸಗಿರುವ ಪ್ರಧಾನಿ ನರೇಂದ್ರ ಮೋದಿ ಅವರ ನಡೆಗೆ ಧಿಕ್ಕಾರವನ್ನು ಕೂಗಲಾಯಿತು. ಕರ್ನಾಟಕ ದಲ್ಲಿ ಕಾಂಗ್ರೆಸ್ ಸರ್ಕಾರ ಹಾಗೂ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಆಡಳಿತವು ಅಧಿಕಾರಕ್ಕೆ ಬಂದ ಕೇವಲ 105 ದಿನಗಳಲ್ಲಿ ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸುವ ಮೂಲಕ ಯುವಕರ ಪರವಾಗಿ ನಿಂತಿದೆ ಎಂದು ಪ್ರತಿಪಾದಿಸಿ ಯುವಕರೇ ಈ ದೇಶದ ಆಸ್ತಿ. ಅವರು ಬೆಳೆದರೆ ಮಾತ್ರ ರಾಜ್ಯ ಮತ್ತು ದೇಶ ಬೆಳೆಯಲು ಸಾಧ್ಯ ಎಂಬ ದೃಢ ನಂಬಿಕೆ ಕಾಂಗ್ರೆಸ್ ಪಕ್ಷಕ್ಕಿದೆ. ಆದರೆ ಬಿಜೆಪಿ ಸರ್ಕಾರ ಹಾಗೂ ಪ್ರಧಾನಿ ಮೋದಿ ಅವರು ಯುವಜನತೆಗೆ ಮೋಸ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕೇಂದ್ರ ಸರ್ಕಾರವು ಯುವಕರಿಗೆ ನೀಡಿದ್ದ ಉದ್ಯೋಗದ ಭರವಸೆಯನ್ನು ಈಡೇರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ನಿರುದ್ಯೋಗದಿಂದ ಬಳಲುತ್ತಿರುವ ಯುವಜನರ ಧ್ವನಿಯಾಗಿ ಯುವ ಕಾಂಗ್ರೆಸ್ ಹೋರಾಟ ಮುಂದುವರಿಸಲಿದೆ ಎಂದು ಉಲ್ಲಾಸ್ ಕಾರೇಹಳ್ಳಿ ತಿಳಿಸಿದರು.
ಈ ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್, ಜಿಲ್ಲಾ ಯುವ ಪ್ರಧಾನ ಕಾರ್ಯದರ್ಶಿ ನಿಶ್ಚಿತ್ (ಚಿಂಟು) ಅಂಜುಮಮ್ ಹಾಗೂ ಇತರ ಯುವ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.