ಹೈದರಾಬಾದ್: ಶಿಕ್ಷಕನೊಬ್ಬ ಶಾಲೆಯಲ್ಲಿಯೇ ಕುಡಿದು ಮಕ್ಕಳಿಗೆ ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಿದ್ದು, ಆತನನ್ನು ಆಂಧ್ರ ಪ್ರದೇಶ ಸರ್ಕಾರ ಅಮಾನತು ಮಾಡಿರುವ ಘಟನೆ ನಡೆದಿದೆ. ಅಮಾನತುಗೊಂಡ ಶಿಕ್ಷಕನನ್ನು ಕೃಷ್ಣ ಜಿಲ್ಲೆಯ ಪಲಕ ಮಂಡಲ್ ಪ್ರದೇಶದ ಮಂಡಲ್ ಪರಿಷತ್ ಶಾಲೆಯ ಕೆ. ಕೋಟೇಶ್ವರ ರಾವ್ ಎಂದು ಗುರುತಿಸಲಾಗಿದೆ.
ಶಿಕ್ಷಕ ಮದ್ಯದ ಬಾಟಲಿಗಳನ್ನು ತರಗತಿಗಳಿಗೆ ಹಾಗೂ ಶಿಕ್ಷಕರ ಕೊಠಡಿಗಳಲ್ಲಿಯೇ ಇಟ್ಟುಕೊಂಡು ಕುಡಿಯುತ್ತಿದ್ದು, ಈ ಬಗ್ಗೆ ಕೇಳಿದರೆ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ.
ಇನ್ನು ಇತ್ತೀಚೆಗೆ ಶಿಕ್ಷಕ ಕುಡಿಯುವ ವಿಡಿಯೋವನ್ನು ಪೋಷಕರು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಉನ್ನತ ಅಧಿಕಾರಿಗಳಿಗೆ ಕೂಡ ದೂರು ನೀಡಿದ್ದಾರೆ. ಈ ದೂರಿನ ಅನ್ವಯ ಶಿಕ್ಷಕನನ್ನು ಅಮಾನತು ಮಾಡಲಾಗಿದೆ.