ಆತುರದಿಂದ ಊಟ ಮಾಡುವಾಗ ಅಥವಾ ಇದ್ದಕ್ಕಿದ್ದಂತೆ ಉಸಿರಿನ ಏರುಪೇರಾದಾಗ ನಮಗೆಲ್ಲರಿಗೂ ಬಿಕ್ಕಳಿಕೆ ಬರುವುದು ಸಹಜ. ಆದರೆ, ಒಮ್ಮೆ ಶುರುವಾದ ಬಿಕ್ಕಳಿಕೆ ತಕ್ಷಣಕ್ಕೆ ನಿಲ್ಲದೆ ಹೋದಾಗ ಗಂಟಲು ನೋವು ಮತ್ತು ತೀವ್ರ ಮುಜುಗರ ಉಂಟಾಗುತ್ತದೆ.
ಎದೆಯ ಕುಳಿ ಮತ್ತು ಉದರದ ಕುಳಿಯನ್ನು ಬೇರ್ಪಡಿಸುವ ಡಯಾಫ್ರಾಮ್ (Diaphragm) ಎಂಬ ಪ್ರಮುಖ ಸ್ನಾಯುವು ನರಗಳ ಪ್ರಚೋದನೆಯಿಂದ ದಿಢೀರನೆ ಸಂಕುಚಿತಗೊಂಡಾಗ ಈ ಬಿಕ್ಕಳಿಕೆ ಉಂಟಾಗುತ್ತದೆ. ಅಡುಗೆಮನೆಯಲ್ಲಿ ಲಭ್ಯವಿರುವ ಕೆಲವು ಸರಳ ಪದಾರ್ಥಗಳು ಹಾಗೂ ಉಸಿರಾಟದ ಶಿಸ್ತಿನಿಂದ ಇದನ್ನು ತಕ್ಷಣವೇ ನಿಯಂತ್ರಿಸಬಹುದು.
ಬಿಕ್ಕಳಿಕೆಗೆ ಪ್ರಮುಖ ಕಾರಣಗಳು:
ಆತುರಾತುರವಾಗಿ ಅಥವಾ ಅತಿಯಾಗಿ ಆಹಾರ ಸೇವಿಸುವುದು.
ಮಸಾಲೆಯುಕ್ತ ಖಾರದ ಅಡುಗೆ ಹಾಗೂ ಕಾರ್ಬೊನೇಟೆಡ್ ತಂಪು ಪಾನೀಯಗಳ ಬಳಕೆ.
ಹಠಾತ್ ಮಾನಸಿಕ ಒತ್ತಡ, ಆತಂಕ ಅಥವಾ ತೀವ್ರ ಉತ್ಸವ.
ಚ್ಯೂಯಿಂಗ್ ಗಮ್ ಜಗಿಯುವಾಗ ಹೊಟ್ಟೆಯೊಳಗೆ ಗಾಳಿ ಸೇರಿಕೊಳ್ಳುವುದು.
ತಕ್ಷಣ ಬಿಕ್ಕಳಿಕೆ ನಿಲ್ಲಿಸುವ ಸರಳ ಮನೆಮದ್ದುಗಳು:
ಉಸಿರಾಟದ ನಿಯಂತ್ರಣ:
ದೀರ್ಘವಾಗಿ ಆಳವಾದ ಉಸಿರನ್ನು ತೆಗೆದುಕೊಂಡು ಸುಮಾರು ೧೦ ರಿಂದ ೧೫ ಸೆಕೆಂಡುಗಳ ಕಾಲ ಉಸಿರು ಹಿಡಿದಿಟ್ಟುಕೊಳ್ಳಿ. ನಂತರ ನಿಧಾನವಾಗಿ ಗಾಳಿಯನ್ನು ಹೊರಬಿಡಿ. ಹೀಗೆ ೨-೩ ಬಾರಿ ಮಾಡುವುದರಿಂದ ರಕ್ತದಲ್ಲಿ ಇಂಗಾಲದ ಡೈಆಕ್ಸೈಡ್ (Carbon dioxide) ಮಟ್ಟ ಹೆಚ್ಚಾಗಿ, ಡಯಾಫ್ರಾಮ್ ಸಡಿಲಗೊಂಡು ಬಿಕ್ಕಳಿಕೆ ನಿಲ್ಲುತ್ತದೆ.
ತಣ್ಣೀರು ಅಥವಾ ಐಸ್ ನೀರು:
ಬಾಯಿ ಮತ್ತು ಗಂಟಲಿನಲ್ಲಿ ಹಾದುಹೋಗುವ ‘ವೇಗಸ್’ (Vagus) ನರವನ್ನು ಉತ್ತೇಜಿಸಲು ತಣ್ಣನೆಯ ನೀರನ್ನು ಸಣ್ಣ ಸಣ್ಣ ಸಿಪ್ಸ್ನಂತೆ ಕುಡಿಯಬೇಕು.
ಸಕ್ಕರೆ ಅಥವಾ ಬೆಲ್ಲದ ಬಳಕೆ:
ಒಂದು ಚಮಚ ಸಕ್ಕರೆ ಅಥವಾ ಸಣ್ಣ ತುಂಡು ಬೆಲ್ಲವನ್ನು ಬಾಯಿಯಲ್ಲಿಟ್ಟುಕೊಂಡು ಅಗಿಯದೆ ನಿಧಾನವಾಗಿ ಕರಗಲು ಬಿಡಿ. ಇದು ಗಂಟಲಿನ ನರಮಂಡಲವನ್ನು ಶಾಂತಗೊಳಿಸುತ್ತದೆ.
ನಿಂಬೆ ಮತ್ತು ಜೇನುತುಪ್ಪ:
ನಿಂಬೆಹಣ್ಣಿನ ತುಂಡಿಗೆ ಸ್ವಲ್ಪ ಉಪ್ಪು ಸಿಂಪಡಿಸಿ ಹೀರುವುದು ಅಥವಾ ಒಂದು ಚಮಚ ಶುದ್ಧ ಜೇನುತುಪ್ಪವನ್ನು ಸವಿಯುವುದರಿಂದ ಬಿಕ್ಕಳಿಕೆ ತಕ್ಷಣವೇ ಶಮನಗೊಳ್ಳುತ್ತದೆ.
ಸಾಂಪ್ರದಾಯಿಕ ಕಷಾಯ ಹಾಗೂ ಚಿಕಿತ್ಸೆ:
ದಾಳಿಂಬೆ ಸಿಪ್ಪೆಯ ಕಷಾಯ: ದಾಳಿಂಬೆ ಹಣ್ಣಿನ ಸಿಪ್ಪೆಯನ್ನು ನೀರಿನಲ್ಲಿ ಹಾಕಿ ೨ ನಿಮಿಷ ಕುದಿಸಿ, ಬೆಚ್ಚಗಿನ ಕಷಾಯವನ್ನು ಕುಡಿಯಿರಿ.
ಶುಂಠಿ ಮತ್ತು ಕಲ್ಲುಸಕ್ಕರೆ: ಹಸಿಶುಂಠಿಯನ್ನು ಕೆಂಪು ಕಲ್ಲುಸಕ್ಕರೆಯೊಂದಿಗೆ ಬಾಯಿಯಲ್ಲಿಟ್ಟುಕೊಂಡು ಚಪ್ಪರಿಸಿದರೆ ರಸವು ಗಂಟಲಿಗಿಳಿದು ಶಮನ ಸಿಗುತ್ತದೆ.
ಸಿಹಿಕುಂಬಳದ ತೊಟ್ಟು: ಸಾಣೆಕಲ್ಲಿನ ಮೇಲೆ ಸ್ವಲ್ಪ ನೀರು ಹಾಕಿ ಒಣಗಿದ ಸಿಹಿಕುಂಬಳದ ತೊಟ್ಟನ್ನು ತೇಯ್ದು, ಬಂದ ರಸವನ್ನು ನಾಲಿಗೆಯ ಮೇಲಿಟ್ಟು ಚಪ್ಪರಿಸುವುದು ಹಳೆಯ ಕಾಲದ ಪರಿಣಾಮಕಾರಿ ವಿಧಾನ.
ದೈನಂದಿನ ಜೀವನದಲ್ಲಿ ವಹಿಸಬೇಕಾದ ಎಚ್ಚರಿಕೆಗಳು:
ಊಟ ಮಾಡುವಾಗ ಧಾವಂತ ಪಡದೆ, ಆಹಾರವನ್ನು ಚೆನ್ನಾಗಿ ಅಗಿದು ಶಾಂತವಾಗಿ ಸೇವಿಸಿ.
ತಿನ್ನುವಾಗ ಅನಗತ್ಯವಾಗಿ ಹೆಚ್ಚು ಮಾತನಾಡುವುದನ್ನು ಹಾಗೂ ಒಂದೇ ಬಾರಿಗೆ ಅತಿಯಾಗಿ ತಿನ್ನುವುದನ್ನು ತಪ್ಪಿಸಿ.
ಪ್ರಾಣಾಯಾಮ ಮತ್ತು ಧ್ಯಾನದ ಮೂಲಕ ದೈಹಿಕ ಹಾಗೂ ಮಾನಸಿಕ ಒತ್ತಡವನ್ನು ಕಡಿತಗೊಳಿಸಿ.
ವೈದ್ಯರ ಸಲಹೆ ಯಾವಾಗ ಅಗತ್ಯ?
ಸಾಮಾನ್ಯವಾಗಿ ಬಿಕ್ಕಳಿಕೆ ಕೆಲವೇ ನಿಮಿಷಗಳಲ್ಲಿ ಕಡಿಮೆಯಾಗುತ್ತದೆ. ಆದರೆ, ಎಲ್ಲಾ ಪ್ರಯತ್ನಗಳ ನಂತರವೂ ಬಿಕ್ಕಳಿಕೆಯು 24ಗಂಟೆಗಳಿಗಿಂತ ಹೆಚ್ಚು ಕಾಲ ಮುಂದುವರಿದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸುವುದು ಕಡ್ಡಾಯ. ಏಕೆಂದರೆ ದೀರ್ಘಕಾಲದ ಬಿಕ್ಕಳಿಕೆಯು ದೇಹದ ಇತರ ಆರೋಗ್ಯ ಸಮಸ್ಯೆಗಳ ಸಂಕೇತವೂ ಆಗಿರಬಹುದು.