ಬೆಳಗಾವಿ: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಮಾಡುತ್ತೇವೆ ಎಂದಿದ್ದ ಸಚಿವ ಉಮೇಶ್ ಕತ್ತಿ ಈಗೇಕೆ ಮಾತನಾಡುತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಶ್ನಿಸಿ ಮಾತಿನ ಚಾಟಿ ಬೀಸಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸರ್ಕಾರ ಬಂದ ಮೇಲೆ ಸುವರ್ಣ ವಿಧಾನಸೌಧದಲ್ಲಿ ಒಂದು ಸಣ್ಣ ಸಭೆ ಕೂಡ ಮಾಡಿಲ್ಲ. ಆಂತರಿಕ ಕಚ್ಚಾಟ ಶುರುವಾಗಿ ಸರ್ಕಾರದ ಆಡಳಿತ ಯಂತ್ರ ಕುಸಿದು ಹೋಗಿದೆ. ಬೆಲೆ ಗಗನಕ್ಕೇರಿ ಎಲ್ಲ ಪದಾರ್ಥಗಳ ಬೆಲೆ ಜಾಸ್ತಿಯಾಗಿದೆ. ಇತ್ತ ಸಾಲು ಸಾಲು ಪ್ರತಿಭಟನೆಗಳಿಂದ ಕಂಗಾಲಾಗಿರುವ ಜನ ಸಾಮಾನ್ಯರು ಸರ್ಕಾರಕ್ಕೆ ಮುತ್ತಿಗೆ ಹಾಕಲು ಮುಂದಾಗಿದ್ದಾರೆ ಎಂದು ಹೇಳಿದರು.